ಬರೇಲಿ ಕೀ ಬರ್ಫಿ (ಅನುವಾದ: ಬರೇಲಿಯ ಬರ್ಫಿ) ೨೦೧೭ರ ಒಂದು ಹಿಂದಿ ಪ್ರಣಯಪ್ರಧಾನ ಹಾಸ್ಯಭರಿತ ಚಲನಚಿತ್ರವಾಗಿದೆ. ಇದನ್ನು ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶಿಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಕೃತಿ ಸೆನೋನ್, ಆಯುಷ್ಮಾನ್ ಖುರಾನಾ ಮತ್ತು ರಾಜ್‍ಕುಮಾರ್ ರಾವ್ ನಟಿಸಿದ್ದಾರೆ. ಪಂಕಜ್ ತ್ರಿಪಾಠಿ ಮತ್ತು ಸೀಮಾ ಪಾಹ್ವಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಭಾರತದಲ್ಲಿ ೧೮ ಆಗಸ್ಟ್ ೨೦೧೭ರಂದು ಬಿಡುಗಡೆಗೊಂಡು ವಿಮರ್ಶಕರಿಂದ ಬಹುತೇಕವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ₹200 ದಶಲಕ್ಷದ ಬಂಡವಾಳದಲ್ಲಿ ತಯಾರಾದ ಈ ಚಿತ್ರವು ವಿಶ್ವಾದ್ಯಂತ ₹600 ದಶಲಕ್ಷದಷ್ಟು ಹಣಗಳಿಸಿ ವಾಣಿಜ್ಯಿಕ ಯಶಸ್ಸಾಗಿ ಹೊರಹೊಮ್ಮಿತು. ಈ ಚಿತ್ರವು ಭಾರತ ಮತ್ತು ವಿದೇಶ ಎರಡೂ ಕಡೆ ೭೦ ದಿನಗಳಿಗಿಂತ ಹೆಚ್ಚು ಓಡಿತು. ೬೩ನೆ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಪೋಷಕ ನಟಿ (ಪಾಹ್ವಾ) ಮತ್ತು ಅತ್ಯುತ್ತಮ ಚಲನಚಿತ್ರ ಸೇರಿದಂತೆ ಆರು ನಾಮನಿರ್ದೇಶನಗಳನ್ನು ಪಡೆದು ಅತ್ಯುತ್ತಮ ನಿರ್ದೇಶಕ (ತಿವಾರಿ) ಮತ್ತು ಅತ್ಯುತ್ತಮ ಪೋಷಕ ನಟ (ರಾವ್) ಪ್ರಶಸ್ತಿಗಳನ್ನು ಗೆದ್ದಿತು. == ಕಥಾವಸ್ತು == ಬಿಟ್ಟಿ ಮಿಶ್ರಾ ಉತ್ತರ ಪ್ರದೇಶದ ಬರೇಲಿಯಲ್ಲಿರುವ ಒಬ್ಬ ಯುವ ಸಮಕಾಲೀನ ಹುಡುಗಿಯಾಗಿರುತ್ತಾಳೆ. ಬಿಟ್ಟಿಯ ತಾಯಿ ಸುಶೀಲಾ ಕೇವಲ ತನ್ನ ಮಗಳ ಮದುವೆ ಮಾಡು ಬಿಡಬೇಕೆಂದು ಬಯಸಿರುತ್ತಾಳೆ. ಬಿಟ್ಟಿ ತನ್ನನ್ನು ಅರ್ಥಮಾಡಿಕೊಳ್ಳುವ ಮತ್ತು ತನ್ನನ್ನು ತಾನಿರುವ ಹಾಗೆ ಸ್ವೀಕರಿಸುವ ಗಂಡನನ್ನು ಬಯಸಿರುತ್ತಾಳೆ. ಅವಳ ತಾಯಿ ಅವಳ ನಿರಂತರ ತಿರಸ್ಕರಣೆಗಳಿಂದ ಕಿರಿಕಿರಿಗೊಳ್ಳುತ್ತಾಳೆ. ಆದರೆ ಅವಳ ತಂದೆ ನರೋತ್ತಮ್ ಅವಳನ್ನು ಅರ್ಥಮಾಡಿಕೊಳ್ಳುತ್ತಾನೆ. ಅವಳ ಅತ್ಯಂತ ಇತ್ತೀಚಿನ ತಿರಸ್ಕರಣೆ ಮತ್ತು ತನ್ನ ಮದುವೆಗೆ ಸಂಬಂಧಿಸಿದ ತನ್ನ ಹೆತ್ತವರ ಕಾಳಜಿಯ ಕೇಳಿದ ನಂತರ, ಬಿಟ್ಟಿ ಪಟ್ಟಣವನ್ನು ಬಿಡಲು ನಿರ್ಧರಿಸಿ ಒಂದು ಟಿಕೇಟನ್ನು ಗೊತ್ತುಗುರಿಯಿಲ್ಲದೇ ಖರೀದಿಸುತ್ತಾಳೆ. ರೇಲ್ವೇ ಪ್ಲಾಟ್‌ಫ಼ಾರ್ಮ್‌ನಲ್ಲಿ ಅವಳು ಬರೇಲಿ ಕೀ ಬರ್ಫಿ ಎಂಬ ಶೀರ್ಷಿಕೆಯಿರುವ ಪುಸ್ತಕವನ್ನು ಅಂಗಡಿಯಲ್ಲಿ ಖರೀದಿಸುತ್ತಾಳೆ. ಅವಳು ಅದನ್ನು ಓದಿ ನಾಯಕನೊಂದಿಗೆ ಗುರುತಿಸಿಕೊಳ್ಳುತ್ತಾಳೆ. ಪುಸ್ತಕದ ಪುಟಗಳಲ್ಲಿ ಸ್ವೀಕೃತಿಯನ್ನು ಕಂಡುಕೊಂಡ ಅವಳು ಮನೆಗೆ ಮರಳಲು ನಿರ್ಧರಿಸುತ್ತಾಳೆ. ಅವಳು ಅದರ ಲೇಖಕ ಪ್ರೀತಮ್ ವಿದ್ರೋಹಿಯನ್ನು ಭೇಟಿಯಾಗಲು ಹಾತೊರೆಯುತ್ತಾಳೆ. ಆ ಪುಸ್ತಕವನ್ನು ಪ್ರಕಟಿಸಿದ ಮುದ್ರಣಾಲಯದ ಮಾಲೀಕನಾದ ಚಿರಾಗ್ ದುಬೇ ಬಳಿ ಅವಳನ್ನು ನಿರ್ದೇಶಿಸಲಾಗುತ್ತದೆ. ವಾಸ್ತವದಲ್ಲಿ ಚಿರಾಗ್ ಪುಸ್ತಕದ ನಿಜವಾದ ಲೇಖಕನೆಂದು ಬಿಟ್ಟಿಗೆ ಗೊತ್ತಿರುವುದಿಲ್ಲ. ಐದು ವರ್ಷಗಳ ಹಿಂದೆ ತನ್ನ ಗೆಳತಿ ಬಬ್ಲಿ ತನ್ನನ್ನು ಬಿಟ್ಟು ಬೇರೆಯವನನ್ನು ಮದುವೆಯಾದಾಗ ತಾನು ಅಳಲನ್ನು ಅನುಭವಿಸಿದ ನಂತರ ಅವನು ಅದನ್ನು ಬರೆದಿರುತ್ತಾನೆ. ಲೇಖಕನಾಗಿ ತನ್ನ ಸ್ವಂತ ಹೆಸರನ್ನು ಕೊಡುವುದರಿಂದ ಬಬ್ಲಿಯ ಹೆಸರು ನಾಶವಾಗಬಹುದಾದ್ದರಿಂದ, ಅವನು ತನ್ನ ಬದಲು ತನ್ನ ಸಹಾಯಕನಾಗಿದ್ದ ಸೌಮ್ಯ ಸ್ವಭಾವದ ಪ್ರೀತಮ್ ವಿದ್ರೋಹಿಗೆ ತನ್ನ ಹೆಸರು ಕೊಡುವಂತೆ ಪುಸಲಾಯಿಸಿರುತ್ತಾನೆ. ವಿದ್ರೋಹಿ ಒಪ್ಪುತ್ತಾನೆ ಆದರೆ ಭವಿಷ್ಯದ ಸಂಭಾವ್ಯ ಸನ್ನಿವೇಶಗಳ ಬಗ್ಗೆ ಬಹಳ ಭಯಗೊಂಡು ನಗರವನ್ನು ತೊರೆದು ಬಿಡುತ್ತಾನೆ. ಲೇಖಕನನ್ನು ಖುದ್ದಾಗಿ ಭೇಟಿಯಾಗುವ ಬದಲು ಅವನಿಗೆ ಪತ್ರಗಳನ್ನು ಬರೆಯುವಂತೆ ಚಿರಾಗ್ ಬಿಟ್ಟಿಯ ಮನವೊಲಿಸುತ್ತಾನೆ. ನಿಜವಾದ ಲೇಖಕನಾದ ಚಿರಾಗ್ ಪ್ರತ್ಯುತ್ತರ ಬರೆದು ಅದನ್ನು ವಿದ್ರೋಹಿಯ ಪ್ರತಿಕ್ರಿಯೆ ಎಂದು ತಪ್ಪಾಗಿ ಹೇಳುತ್ತಾನೆ. ಈ ನಡುವೆ, ಚಿರಾಗ್ ಮತ್ತು ಬಿಟ್ಟಿ ಒಳ್ಳೆ ಗೆಳೆಯರಾಗುತ್ತಾರೆ. ವಿದ್ರೋಹಿ ಅವಳನ್ನು ಭೇಟಿಯಾಗಲು ನಿರಾಕರಿಸಿದಾಗ ಬಿಟ್ಟಿ ತಾಳ್ಮೆ ಕಳೆದುಕೊಳ್ಳಲು ಆರಂಭಿಸುತ್ತಾರೆ. ಬಿಟ್ಟಿಯನ್ನು ಪ್ರೀತಿಸಲು ಆರಂಭಿಸಿದ ಚಿರಾಗ್ ಅವಳಿಗೆ ನಿಜ ಹೇಳಲು ನಿರ್ಧರಿಸುತ್ತಾನೆ. ಬಿಟ್ಟಿಯ ಮನಸ್ಸನ್ನು ಕೆಡಿಸಿದ್ದಕ್ಕಾಗಿ ಅವಳ ತಾಯಿ ಲೇಖಕನನ್ನು ದ್ವೇಷಿಸುತ್ತಾಳೆಂದು ತಿಳಿದ ಮೇಲೆ, ಅವನು ನಿಜವನ್ನು ಹೇಳದಿರಲು ನಿರ್ಧರಿಸುತ್ತಾನೆ. ಬದಲಾಗಿ ವಿದ್ರೋಹಿಯನ್ನು ಬಲಿಪಶುವಾಗಿ ಮಾಡಲು ಅವನನ್ನು ಹುಡುಕ ತೊಡಗುತ್ತಾನೆ. ಚಿರಾಗ್ ವಿದ್ರೋಹಿಯನ್ನು ಲಕ್ನೋದಲ್ಲಿ ಪತ್ತೆಹಚ್ಚಿ ಬಿಟ್ಟಿಯ ವ್ಯಾಮೋಹ ಗುಣವಾಗುವಂತೆ ಅವಳೆದುರು ಒರಟಾಗಿ ನಟಿಸುವಂತೆ ಮನವೊಲಿಸುತ್ತಾನೆ. ಬಿಟ್ಟಿಯನ್ನು ಭೇಟಿಯಾದ ಬಳಿಕ ವಿದ್ರೋಹಿ ಅಸಭ್ಯ ವ್ಯಕ್ತಿಯಾಗಿರುವಂತೆ ನಟಿಸುತ್ತಾನೆ. ಆದರೆ, ತನ್ನ ಅಸಭ್ಯ ವರ್ತನೆಯ ಹೊರತಾಗಿಯೂ, ಅವನು ತನ್ನ ಒಂದು ಸೂಕ್ಷ್ಮ ಅಂಶವನ್ನು ತೋರಿಸುತ್ತಾನೆ. ಇದರಿಂದ ಬಿಟ್ಟಿ ಮತ್ತು ಅವಳ ಕುಟುಂಬ ಅವನನ್ನು ಇಷ್ಟಪಡುತ್ತದೆ. ಅಲ್ಲಿಂದ ಹೊರಟುಬಿಡುವಂತೆ ಚಿರಾಗ್ ವಿದ್ರೋಹಿಗೆ ಎಚ್ಚರಿಕೆ ನೀಡುತ್ತಾನೆ. ಆದರೆ ಅವನು ಹೊರಡದಿದ್ದಾಗ ಚಿರಾಗ್ ಸಿಟ್ಟಾಗುತ್ತಾನೆ. ವಿದ್ರೋಹಿ ತಾನು ಉಳಿದುಕೊಂಡಿರುವುದಕ್ಕೆ ನಿಜವಾದ ಕಾರಣವನ್ನು ಹೇಳುತ್ತಾನೆ: ಅವನು ಬಿಟ್ಟಿಯ ಗೆಳತಿ ರಮಾಳನ್ನು ಪ್ರೀತಿಸತೊಡಗಿರುತ್ತಾನೆ. ಆದರೆ ಬಿಟ್ಟಿಯ ತಾಯಿ ವಿದ್ರೋಹಿಯಲ್ಲಿ ಪರಿಪೂರ್ಣ ಅಳಿಯನನ್ನು ಕಾಣುತ್ತಾಳೆ. ಹಾಗಾಗಿ, ವಿದ್ರೋಹಿ ಒಬ್ಬ ವಿಧುರನೆಂದು ಚಿರಾಗ್ ಸುಳ್ಳು ಹೇಳುತ್ತಾನೆ, ಏಕೆಂದರೆ ವಿಚ್ಛೇದಿತನನ್ನು ಮದುವೆಯಾಗುವುದು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ವಿದ್ರೋಹಿ ತನ್ನ ಭಾವನೆಗಳನ್ನು ರಮಾ ಎದುರು ಹೇಳುತ್ತಾನೆ. ರಮಾ ಅವನನ್ನು ಇಷ್ಟಪಡುತ್ತಿದ್ದರೂ ಅವನು ವಿಚ್ಛೇದಿತನೆಂದು ಭಾವಿಸಿ ಅವನನ್ನು ತಿರಸ್ಕರಿಸುತ್ತಾಳೆ. ಅನೇಕ ವರ್ಷಗಳ ಬೆದರಿಸುವಿಕೆಯ ನಂತರ, ಇದು ಅವನ ಸಹನೆಯನ್ನು ಕಳೆದುಬಿಡುತ್ತದೆ; ಬಿಟ್ಟಿಯನ್ನು ಅವನಿಂದ ದೂರ ಕರೆದೊಯ್ಯುವೆನೆಂದು ವಿದ್ರೋಹಿ ಚಿರಾಗ್‍ಗೆ ಬೆದರಿಕೆ ಹಾಕುತ್ತಾನೆ. ಬಿಟ್ಟಿಯು ಎಂದೂ ವಿದ್ರೋಹಿಯಂಥವನನ್ನು ಪ್ರೀತಿಸುವುದಿಲ್ಲವೆಂದು ಚಿರಾಗ್ ನಂಬಿರುತ್ತಾನೆ. ಅವನಿಗೆ ಆಘಾತವಾಗುವಂತೆ, ವಿದ್ರೋಹಿ ಬಿಟ್ಟಿಯ ಮನಸ್ಸು ಗೆದ್ದು ಅವನನ್ನು ತಮ್ಮ ನಿಶ್ಚಿತಾರ್ಥಕ್ಕೆ ಆಹ್ವಾನಿಸುತ್ತಾನೆ. ತಾನು ಖುಶಿಯಾಗಿರಲಾಗದಿದ್ದರೆ, ವಿದ್ರೋಹಿ ಕೂಡ ಖುಶಿಯಾಗಿರುವಂತೆ ತಾನು ಬಿಡುವುದಿಲ್ಲ ಎಂದು ಚಿರಾಗ್ ಹೇಳುತ್ತಾನೆ. ವಿದ್ರೋಹಿ ಚಿರಾಗ್‍ನ ಸ್ವಾರ್ಥವನ್ನು ಖಂಡಿಸುತ್ತಾನೆ. ಅವಳು ತುಂಬ ಸಂತೋಷವಾಗಿರುವುದನ್ನು ನೋಡಿ ಚಿರಾಗ್ ಬಿಟ್ಟಿಗೆ ನಿಜವನ್ನು ಹೇಳಲು ಸಾಧ್ಯವಾಗುವುದಿಲ್ಲ. ತನ್ನ ಸ್ವಾರ್ಥವು ತನ್ನನ್ನು ಕುರುಡನನ್ನಾಗಿಸಿರುವುದು ಅವನಿಗೆ ಅರಿವಾಗುತ್ತದೆ. ಬಿಟ್ಟಿ ಖುಶಿಯಾಗಿರುವವರೆಗೆ ತಾನು ಖುಶಿಯಾಗಿರುತ್ತೇನೆ ಎಂದು ಅವನು ನಿರ್ಧರಿಸಿ ವಿದ್ರೋಹಿ ಎದುರು ಕ್ಷಮೆ ಕೇಳುತ್ತಾನೆ. ಅವನು ಕ್ಷಮಿಸುತ್ತಾನೆ. ನಿಶ್ಚಿತಾರ್ಥದ ದಿನದಂದು, ಅವನು ಬಿಟ್ಟಿಗಾಗಿ ಬರೆದ ಸಾಲುಗಳನ್ನು ಓದಿ ಹೇಳುವಂತೆ ವಿದ್ರೋಹಿ ಚಿರಾಗ್‍ನನ್ನು ಕೇಳಿಕೊಳ್ಳುತ್ತಾನೆ. ಚಿರಾಗ್ ಓದಲು ಆರಂಭಿಸುತ್ತಾನೆ ಆದರೆ ಅವನ ಭಾವನೆಗಳು ಅವನನ್ನು ಜಯಿಸುತ್ತವೆ. ಅವನ ಭಾಷಣವು ಎಲ್ಲರಿಗೂ ಕಣ್ಣೀರು ಬರಿಸುತ್ತದೆ. ಬಿಟ್ಟಿ ನಿಜವನ್ನು ಬಹಿರಂಗಪಡಿಸುತ್ತಾಳೆ: ವಿದ್ರೋಹಿ ತನಗೆ ಎಲ್ಲವನ್ನು ಹೇಳಿದ್ದನು, ಚಿರಾಗ್ ನಿಜವಾದ ಲೇಖಕನಾಗಿದ್ದರಿಂದ ಹಿಡಿದು ರಮಾ ತನ್ನನ್ನು ತಿರಸ್ಕರಿಸುವವರೆಗಿನ ಎಲ್ಲ ಸಂಗತಿಗಳನ್ನು. ಚಿರಾಗ್ ನಿಜವಾಗಿಯೂ ಬಿಟ್ಟಿಯನ್ನು ಪ್ರೀತಿಸುತ್ತಿರುವನೆ ಅಥವಾ ಬಿಟ್ಟಿ ತನ್ನ ಮಾಜಿ ಪ್ರೇಯಸಿಯನ್ನು ಹೋಲುತ್ತಾಳೆಂಬ ಕಾರಣದಿಂದ ಪ್ರೀತಿಸುತ್ತಿರುವನೆ ಎಂಬುದನ್ನು ಮಾತ್ರ ಅವರು ಪರೀಕ್ಷಿಸುತ್ತಿರುತ್ತಾರೆ. ಚಿರಾಗ್ ಮತ್ತು ವಿದ್ರೋಹಿ ಆಲಿಂಗಿಸುತ್ತಾರೆ. ಚಿರಾಗ್ ಮತ್ತು ಬಿಟ್ಟಿ ಒಟ್ಟಾಗಿರುವ ಹಾಗೂ ವಿದ್ರೋಹಿ ಮತ್ತು ರಮಾ ಒಟ್ಟಾಗಿರುವುದರೊಂದಿಗೆ ಚಲನಚಿತ್ರವು ಅಂತ್ಯವಾಗುತ್ತದೆ. == ಪಾತ್ರವರ್ಗ == ಚಿರಾಗ್ ದುಬೇ ಪಾತ್ರದಲ್ಲಿ ಆಯುಷ್ಮಾನ್ ಖುರಾನಾ ಪ್ರೀತಮ್ ವಿದ್ರೋಹಿ ಪಾತ್ರದಲ್ಲಿ ರಾಜ್‍ಕುಮಾರ್ ರಾವ್ ಬಿಟ್ಟಿ ಮಿಶ್ರಾ ಪಾತ್ರದಲ್ಲಿ ಕೃತಿ ಸೆನೋನ್ ನರೋತ್ತಮ್ ಮಿಶ್ರಾ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಸುಶೀಲಾ ದೇವಿ ಮಿಶ್ರಾ ಪಾತ್ರದಲ್ಲಿ ಸೀಮಾ ಪಾಹ್ವಾ ವಿದ್ರೋಹಿ ತಾಯಿ ಪಾತ್ರದಲ್ಲಿ ಸಪ್ನಾ ಸಾಂಡ್ ಚಿರಾಗ್‍ನ ತಾಯಿ ಪಾತ್ರದಲ್ಲಿ ಲವ್‍ಲೀನ್ ಮಿಶ್ರಾ ಮುನ್ನಾ ಪಾತ್ರದಲ್ಲಿ ರೋಹಿತ್ ಚೌಧರಿ ರಮಾ ಪಾತ್ರದಲ್ಲಿ ಸ್ವಾತಿ ಸೇಮ್ವಾಲ್ ಬಬಲಿ ಪಾತ್ರದಲ್ಲಿ ನೆಯ್ಲಾ ಗ್ರೇವಾಲ್ ನಿರೂಪಕನಾಗಿ ಜಾವೇದ್ ಅಕ್ತರ್ ಗೂಂಡಾ ಪಾತ್ರದಲ್ಲಿ ರಾಕೇಶ್ ದುಬೇ == ಧ್ವನಿವಾಹಿನಿ == ಚಿತ್ರದ ಸಂಗೀತವನ್ನು ತನಿಷ್ಕ್ ಬಾಗ್ಚಿ, ಆರ್ಕೊ ಪ್ರಾವೊ ಮುಖರ್ಜಿ, ಸಮೀರಾ ಕೊಪ್ಪೀಕರ್, ಸಮೀರ್ ಉದ್ದೀನ್ ಮತ್ತು ವಾಯು ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಆರ್ಕೊ ಪ್ರಾವೊ ಮುಖರ್ಜಿ, ತನಿಷ್ಕ್ ಬಾಗ್ಚಿ, ಶಬ್ಬೀರ್ ಅಹ್ಮದ್, ಪುನೀತ್ ಶರ್ಮಾ, ಅಭಿಷೇಕ್ ವರ್ಮಾ ಮತ್ತು ವಾಯು ಬರೆದಿದ್ದಾರೆ. ಚಿತ್ರದ ಮೊದಲ ಹಾಡಾದ "ಸ್ವೀಟಿ ತೇರಾ ಡ್ರಾಮಾ" ವನ್ನು ೨೪ ಜುಲೈ ೨೦೧೭ರಂದು ಬಿಡುಗಡೆ ಮಾಡಲಾಯಿತು. ಎರಡನೇ ಹಾಡಾದ "ನಜ಼ಮ್ ನಜ಼ಮ್" ಅನ್ನು ೩೧ ಜುಲೈ ೨೦೧೭ರಂದು ಬಿಡುಗಡೆ ಮಾಡಲಾಯಿತು. ಮೂರನೇ ಹಾಡಾದ "ಟ್ವಿಸ್ಟ್ ಕಮರಿಯಾ" ವನ್ನು ೮ ಆಗಸ್ಟ್ ೨೦೧೭ರಂದು ಬಿಡುಗಡೆ ಮಾಡಲಾಯಿತು. ಚಿತ್ರದ ಧ್ವನಿವಾಹಿನಿಯನ್ನು ಜ಼ೀ ಮ್ಯೂಸಿಕ್ ಕಂಪನಿ ೧೧ ಆಗಸ್ಟ್ ೨೦೧೭ರಂದು ಬಿಡುಗಡೆ ಮಾಡಿತು. == ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ == === ವಿಮರ್ಶಾತ್ಮಕ ಪ್ರತಿಕ್ರಿಯೆ === ಬರೇಲಿ ಕೀ ಬರ್ಫಿ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಇದರ ಹೃದಯಸ್ಪರ್ಶಿ ವಾಸ್ತವಿಕ ಕಥೆ ಮತ್ತು ನಟನೆಗಳಿಗಾಗಿ, ವಿಶೇಷವಾಗಿ ರಾಜ್‍ಕುಮಾರ್ ರಾವ್ ನಟನೆಗಾಗಿ ಇದನ್ನು ಪ್ರಶಂಸಿಸಲಾಯಿತು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ೨೦ ಜನವರಿ ೨೦೧೮ - ಫಿಲ್ಮ್‌ಫೇರ್ ಪ್ರಶಸ್ತಿಗಳು ಅತ್ಯುತ್ತಮ ನಿರ್ದೇಶಕಿ - ಅಶ್ವಿನಿ ಅಯ್ಯರ್ ತಿವಾರಿ - ಗೆಲುವು ಅತ್ಯುತ್ತಮ ಪೋಷಕ ನಟ - ರಾಜ್‍ಕುಮಾರ್ ರಾವ್ - ಗೆಲುವು ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶಿತ ಅತ್ಯುತ್ತಮ ಪೋಷಕ ನಟಿ - ಸೀಮಾ ಭಾರ್ಗವ - ನಾಮನಿರ್ದೇಶಿತ ಅತ್ಯುತ್ತಮ ಧ್ವನಿಸುರುಳಿ ಸಂಗ್ರಹ - ಆರ್ಕೊ, ತನಿಷ್ಕ್ ಬಾಗ್ಚಿ, ಸಮೀರಾ ಕೊಪ್ಪಿಕರ್, ಸಮೀರ್ ಉದ್ದೀನ್, ವಾಯು - ನಾಮನಿರ್ದೇಶಿತ ಅತ್ಯುತ್ತಮ ಹಿನ್ನೆಲೆ ಗಾಯಕ - ಆರ್ಕೊ ಪ್ರಾವೊ ಮುಖರ್ಜಿ ("ನಜ಼ಮ್ ನಜ಼ಮ್" ಹಾಡಿಗಾಗಿ) - ನಾಮನಿರ್ದೇಶಿತ ಅತ್ಯುತ್ತಮ ಗೀತ ಸಾಹಿತ್ಯ - ಆರ್ಕೊ ಪ್ರಾವೊ ಮುಖರ್ಜಿ ("ನಜ಼ಮ್ ನಜ಼ಮ್" ಹಾಡಿಗಾಗಿ) - ನಾಮನಿರ್ದೇಶಿತ ಅತ್ಯುತ್ತಮ ಸಂಭಾಷಣೆ - ನಿತೇಶ್ ತಿವಾರಿ, ಶ್ರೇಯಸ್ ಜೈನ್ - ನಾಮನಿರ್ದೇಶಿತ == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಬರೇಲಿ ಕೀ ಬರ್ಫಿ @ ಐ ಎಮ್ ಡಿ ಬಿ